April 24, 2024

Bhavana Tv

Its Your Channel

ಕರ್ನಾಟಕ ವಿಶ್ವವಿದ್ಯಾಲಯದ ಮೂರನೇ ವಲಯ ಮಟ್ಟದ ಪದವಿ ಕಾಲೇಜುಗಳ ಪುರುಷರ ವಾಲಿಬಾಲ್ ಪಂದ್ಯಾವಳಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ

ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯದ ಮೂರನೇ ವಲಯ ಮಟ್ಟದ ಪದವಿ ಕಾಲೇಜುಗಳ ಪುರುಷರ ವಾಲಿಬಾಲ್ ಪಂದ್ಯಾವಳಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಅದ್ಧೂರಿಯಾಗಿ ಜರುಗಿತು.

ಪಂದ್ಯಾವಳಿಯ ಉದ್ಘಾಟಕರಾಗಿ ಆಗಮಿಸಿದ ಭಟ್ಕಳದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಸಂತರಾಯ ವಿ ಗಾಂವಕರ್ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯು ವಾಲಿಬಾಲ್ ಕ್ರೀಡೆಯ ಗಂಡುಮೆಟ್ಟಿದ ಜಿಲ್ಲೆಯಾಗಿದ್ದು ಹಲವಾರು ಅತ್ಯುತ್ತಮ ಕ್ರೀಡಾಪಟುಗಳನ್ನು ನೀಡಿದೆ ಎಂದು ಸ್ಮರಿಸಿದರು. ಶಿಕ್ಷಣವು ಮಾನಸಿಕ ನೆಮ್ಮದಿಯನ್ನು ನೀಡಿದರೆ, ಕ್ರೀಡೆಯು ದೈಹಿಕ ಆರೋಗ್ಯವನ್ನು ನೀಡುವ ಮೂಲಕ ನೆಮ್ಮದಿಯನ್ನು ನೀಡುತ್ತದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಟ್ಕಳ ರೋಟರಿ ಕ್ಲಬ್‌ನ ಕಾರ್ಯದರ್ಶಿ ಶ್ರೀನಿವಾಸ್ ಪಡಿಯಾರ್ ಮಾತನಾಡಿ ಕ್ರೀಡೆಯು ನಾಯಕತ್ವ ಹಾಗೂ ಸಹಕಾರಿ ಗುಣವನ್ನು ಕಲಿಸುತ್ತದೆಯಲ್ಲದೆ ಜೀವನಕ್ಕೆ ಪಾಠವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಟ್ಕಳ ಎಜ್ಯುಕೇಶನ್ ಟ್ರಸ್ಟನ ಅಧ್ಯಕ್ಷರಾದ ಡಾ. ಸುರೇಶ್ ನಾಯಕ್ ರವರು ಕ್ರೀಡಾ ಸ್ಪೂರ್ತಿಯಿಂದ ಆಟವನ್ನಾಡಿ ಎಂದು ಕಿವಿಮಾತುಗಳನ್ನು ನೀಡಿದರು. ಈ ಸಂಧರ್ಭದಲ್ಲಿ ಟ್ರಸ್ಟಿ ಮ್ಯಾನೇಜರ್ ರಾಜೇಶ್ ನಾಯಕ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಶ್ರೀನಾಥ್ ಪೈ ಸ್ವಾಗತಿಸಿದರೆ, ಬಿಬಿಎ ಕಾಲೇಜಿನ ಉಪ ಪ್ರಾಂಶುಪಾಲರಾದ ವಿಶ್ವನಾಥ್ ಭಟ್ ವಂದಿಸಿದರು. ವಿದ್ಯಾರ್ಥಿನಿ ಪ್ರತಿಕ್ಷಾ ಕಡ್ಲೆ ನಿರೂಪಿಸಿದರು. ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಯನ್ನು ಗೆದ್ದ ತಂಡಗಳಿಗೆ ಬಹುಮಾನವನ್ನು ವತರಿಸಲಾಗಿತು. ಪ್ರಥಮ ಸ್ಥಾನವನ್ನು ಕುಮಟಾದ ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜು ತಂಡ ಪಡೆದರೆ ಹಾಗೂ ದ್ವಿತೀಯ ಸ್ಥಾನವನ್ನು ಸದಾಶಿವಗಡದ ಬಿ.ಜಿ.ವಿ.ಎಸ್ ಕಾಲೇಜು ತಂಡ ಪಡೆಯಿತು. ಉತ್ತರಕನ್ನಡ ಜಿಲ್ಲೆಯ ಸುಮಾರು ೧೩ಕ್ಕೂ ಹೆಚ್ಚು ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು ಯಶಸ್ವಿಯಾಗಿ ನೆರವೇರಿತು.

error: