April 27, 2024

Bhavana Tv

Its Your Channel

ಕುಮಟಾ :ರಿಲೇಬಲ್ ಕೆಶ್ಯೂಫ್ಯಾಕ್ಟರಿ ಮಾಲಕರಿಂದ ತಮಗಾದ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಫ್ಯಾಕ್ಟರಿ ಕಾರ್ಮಿಕರು ಮೆರವಣಿಗೆಯಲ್ಲಿ ತೆರಳಿ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕಳೆದ ೧೦ ವರ್ಷಗಳಿಂದ ರಿಲೇಬಲ್ ಕೆಶ್ಯೂಫ್ಯಾಕ್ಟರಿಯಲ್ಲಿ ಗೇರುಬೀಜ ಸಂಸ್ಕರಣೆ ಕೆಲಸವನ್ನು ಸ್ಥಳೀಯ ೬೦೦ ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರಿಂದ ದುಡಿಸಿಕೊಳ್ಳಲಾಗುತ್ತಿತ್ತು. ಇಲ್ಲಿನ ಕಾರ್ಮಿಕರು ಬೆಲೆ ಏರಿಕೆಯಿಂದ ಜೀವನ ನಿರ್ವಹಣೆ ಕಷ್ಟವಾದಾಗ ಸರ್ಕಾರದ ನಿಯಮಾವಳಿಯಂತೆ ಕನಿಷ್ಟ ವೇತನಕ್ಕಾಗಿ ಒತ್ತಾಯಿಸಿದ್ದಾರೆ. ಆಡಳಿತ ಮಂಡಳಿಯ ಹಠಮಾರಿತನ ಧೋರಣೆಯಿಂದ ಕಾರ್ಮಿಕರು ಮುಷ್ಕರ ಮಾಡಿದ್ದರು. ಕಾರ್ಮಿಕ ಇಲಾಖೆಯ ಮಧ್ಯಪ್ರವೇಶದಿಂದ ಕಾರ್ಮಿಕರು ಮುಷ್ಕರ ಹಿಂಪಡೆದಿದ್ದರು. ಇದರ ಬಳಿಕ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಸಂಘ ರಚಿಸಿಕೊಂಡು ಕನಿಷ್ಟ ವೇತನ ಹಾಗೂ ಹಿಂದಿನ ಬಾಕಿ ಕೊಡುವಂತೆ ಒತ್ತಾಯಿಸುತ್ತಲೇ ಇದ್ದರೂ ಫ್ಯಾಕ್ಟರಿ ಮಾಲಕರು ಕಿವಿಗೊಟ್ಟಿಲ್ಲ. ಇದಕ್ಕೆ ವಿರುದ್ಧವಾಗಿ ಸಂಘದ ೧೫ ಮಂದಿ ಪದಾಧಿಕಾರಿಗಳನ್ನು ಸದಸ್ಯರನ್ನು ಅಮಾನತುಗೊಳಿಸಿದ್ದು ಮಾತ್ರವಲ್ಲದೇ ೩೫೦ಕ್ಕೂ ಹೆಚ್ಚು ಕಾರ್ಮಿಕರಿಗೆ ಕೆಲಸಕ್ಕೆ ಬಾರದಂತೆ ತಿಳಿಸಿದರು. ಫ್ಯಾಕ್ಟರಿಗೆ ಬೀಗಮುದ್ರೆ ಹಾಕಿ ಎಲ್ಲ ಕಾರ್ಮಿಕರನ್ನು ಅಕ್ಷರಶಃ ಬೀದಿಗೆ ತಳ್ಳಿದರು.

ಈ ಬಗ್ಗೆ ಬೆಳಗಾವಿಯ ಕಾರ್ಮಿಕ ಉಪ ಆಯುಕ್ತರ ಸಮ್ಮುಖದಲ್ಲಿ ಹಲವು ಸುತ್ತಿನ ಸಂಧಾನ ಮಾತುಕತೆ ನಡೆಸಿದರೂ ಫ್ಯಾಕ್ಟರಿ ಆಡಳಿತ ವರ್ಗ ಒಪ್ಪಿಲ್ಲ. ಇದರಿಂದಾಗಿ ಕಾರ್ಮಿಕ ಉಪ ಆಯುಕ್ತರು ರಿಲೇಬಲ್ ಕ್ಯಾಶ್ಯೂ ಫ್ಯಾಕ್ಟರಿಯನ್ನು ಕಾನೂನು ಬಾಹಿರವಾಗಿ ಬಂದ್ ಮಾಡಲಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ಬಗ್ಗೆ ಸರ್ಕಾರದಿಂದ ಯಾವುದೇ ಕ್ರಮವಾಗಿಲ್ಲ.

ಈ ನಡುವೆ ರಿಲೇಬಲ್ ಕ್ಯಾಶ್ಯೂ ಫ್ಯಾಕ್ಟರಿಯ ಆಡಳಿತ ವರ್ಗ ಫ್ಯಾಕ್ಟರಿಯ ಯಂತ್ರಗಳನ್ನು ಬೇರೆಡೆ ಸಾಗಿಸುವ ಪ್ರಯತ್ನ ನಡೆಸಿದೆ. ಈ ವಿಷಯವನ್ನು ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳಿಗೂ ತಿಳಿಸಿದ್ದೇವೆ. ಉಪವಿಭಾಗಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ರಿಲೇಬಲ್ ಕ್ಯಾಶ್ಯೂ ಫ್ಯಾಕ್ಟರಿ ಪುನಃ ಕಾರ್ಯಾರಂಭ ಮಾಡಿಸಿ ಅನ್ಯಾಯಕ್ಕೊಳಗಾಗಿರುವ ೬೦೦ ಕ್ಕೂ ಹೆಚ್ಚು ಕಾರ್ಮಿಕರಿಗೆ ನ್ಯಾಯ ಕೊಡಿಸಬೇಕು ಎಂದು ಕಾರ್ಮಿಕರು ಉತ್ತರಕನ್ನಡ ಜಿಲ್ಲಾ ಕ್ಯಾಶ್ಯೂ ಇಂಡಸ್ಟ್ರೀಸ್ ಕಾರ್ಮಿಕರ ಸಂಘದ ಸಹಯೋಗದಲ್ಲಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮನವಿಯನ್ನು ಉಪವಿಭಾಗಾಧಿಕಾರಿ ಎಂ.ಅಜಿತ್ ಅನುಪಸ್ಥಿತಿಯಲ್ಲಿ ಕಚೇರಿ ಮುಖ್ಯಸ್ಥ ವಿ.ಆರ್.ನಾಯ್ಕ ಸ್ವೀಕರಿಸಿದರು.
ಈ ವೇಳೆ ಉತ್ತರಕನ್ನಡ ಜಿಲ್ಲಾ ಕ್ಯಾಶ್ಯೂ ಇಂಡಸ್ಟ್ರೀಸ್ ಕಾರ್ಮಿಕರ ಸಂಘದ ಅಧ್ಯಕ್ಷ ತಿಲಕ ಗೌಡ, ಪ್ರಧಾನ ಕಾರ್ಯದರ್ಶಿ ಸರೋಜಾ ನಾರಾಯಣ ಪಟಗಾರ,ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿದರು. ಪ್ರತಿಭಟನೆಗೆ ಸಿಐಟಿಯು ಹಾಗೂ ಇತರ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿ ಪಾಲ್ಗೊಂಡಿದ್ದರು.

error: