May 15, 2024

Bhavana Tv

Its Your Channel

ಕೆಂಪೇಗೌಡ ಜಾಗೃತಿ ರಥಕ್ಕೆ ಕೆ.ಆರ್.ಪೇಟೆಯಲ್ಲಿ ತಹಶೀಲ್ದಾರ್ ರೂಪ ನೇತೃತ್ವದಲ್ಲಿ ಭವ್ಯಸ್ವಾಗತ

ಕೆ.ಆರ್.ಪೇಟೆ:- ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆಯ ಲೋಕಾರ್ಪಣೆ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಸಂಚರಿಸಿ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸುತ್ತಿರುವ ಕೆಂಪೇಗೌಡ ಜಾಗೃತಿ ರಥಕ್ಕೆ ಕೆ.ಆರ್.ಪೇಟೆಯಲ್ಲಿ ತಹಶೀಲ್ದಾರ್ ರೂಪ ನೇತೃತ್ವದಲ್ಲಿ ಭವ್ಯಸ್ವಾಗತ ನೀಡಲಾಯಿತು.

ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಾಡಪ್ರಭು ಕೆಂಪೇಗೌಡರ 108ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆಯನ್ನು ನವೆಂಬರ್ 11ರಂದು ಭಾರತ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ.

ನಾಡಿನಾದ್ಯಂತ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸುತ್ತಿರುವ ಕೆಂಪೇಗೌಡ ಜಾಗೃತಿ ರಥವು ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಸಂಚರಿಸಲು ಆಗಮಿಸಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ರೂಪ ಹಾಗೂ ವಿವಿಧ ಸಂಘಟನೆಗಳ ಮುಖಂಡರು ತಾಲ್ಲೂಕು ಮಟ್ಟದ ಅಧಿಕಾರಿಗಳು ಭವ್ಯ ಸ್ವಾಗತ ನೀಡಿ ಬರಮಾಡಿಕೊಂಡರು..

ಕೆ.ಆರ್.ಪೇಟೆ ತಹಶೀಲ್ದಾರ್ ರೂಪ ಅವರು ಪವಿತ್ರ ಮೃತ್ತಿಕೆಯನ್ನು ಸಮರ್ಪಿಸಿ ಮಾತನಾಡಿ ವಿಜಯನಗರದ ಅರಸರ ಕಾಲದಲ್ಲಿಯೇ ಸರ್ವ ಜನಾಂಗದ ಶಾಂತಿ, ನೆಮ್ಮದಿ ಹಾಗೂ ಅಭಿವೃದ್ಧಿಯ ತೋಟದ ಪರಿಕಲ್ಪನೆಯ ಮಾದರಿಯಲ್ಲಿ ವಿಶ್ವಮಾನ್ಯ ನಗರವಾದ ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರ ದೂರದರ್ಶಿತ್ವದ ಆಡಳಿತವು ಮಾದರಿಯಾಗಿದೆ.
ಕೆಂಪೇಗೌಡರ ಬೃಹತ್ ಕಂಚಿನ ಪ್ರತಿಮೆಯನ್ನು ರಾಜ್ಯ ಸರ್ಕಾರವು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ದೇವನಹಳ್ಳಿ ಬಳಿ ನಿರ್ಮಿಸುವ ಮೂಲಕ ಧರ್ಮಪ್ರಭುಗಳ ಇತಿಹಾಸ ಹಾಗೂ ಪರಂಪರೆಯ ಬಗ್ಗೆ ತಿಳಿಯಲು ಅನುಕೂಲ ಮಾಡಿಕೊಟ್ಟಿದೆ. ಮಾನ್ಯ ಪ್ರಧಾನಮಂತ್ರಿಗಳು ಸಮಾನತೆಯ ಭವ್ಯ ಪ್ರತಿಮೆಯನ್ನು ಲೋಕಾರ್ಪಣೆ ಮಾಡುವ ಮೂಲ ನಾಡಿಗೆ ಪ್ರಗತಿ, ಸಮಾನತೆ ಹಾಗೂ ಏಕತೆಯ ಸಂದೇಶ ನೀಡಲಿದ್ದಾರೆ. ಕೆ.ಆರ್.ಪೇಟೆ ತಾಲ್ಲೂಕಿನ ಎಲ್ಲಾ 34 ಗ್ರಾಮ ಪಂಚಾಯತಿ ಕೇಂದ್ರಗಳು ಹಾಗೂ ನೂರಾರು ಗ್ರಾಮಗಳಲ್ಲಿ ಸಂಚರಿಸಲಿರುವ ಕೆಂಪೇಗೌಡ ಜಾಗೃತಿ ರಥವು ದೇವಾಲಯಗಳು, ನದಿಗಳು ಹಾಗೂ ಕೆರೆಕಟ್ಟೆಗಳಲ್ಲಿ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಿ ಬೆಂಗಳೂರಿಗೆ ತಲುಪಿಸಲಿವೆ ಎಂದು ತಹಶೀಲ್ದಾರ್ ರೂಪ ಹೇಳಿದರು..

ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮೇಗೌಡ, ಪುರಸಭೆ ಅಧ್ಯಕ್ಷೆ ಮಹಾದೇವಿನಂಜುAಡ, ತಾಲ್ಲೂಕು ಪಂಚಾಯತಿ ಇಓ ಸತೀಶ್, ಜಿ.ಪಂ ಮಾಜಿಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಪಿ.ಎಲ್.ಡಿ ಬ್ಯಾಂಕ್ ಮಾಜಿಅಧ್ಯಕ್ಷ ಕೆ.ಎಸ್.ಬಸವೇಗೌಡ, ಮುಖಂಡರಾದ ಡಿ.ಪಿ.ಪರಮೇಶ್, ಸಚಿವರ ಆಪ್ತಸಹಾಯಕರಾದ ದಯಾನಂದ, ಉಪತಹಶೀಲ್ದಾರ್ ಲಕ್ಷ್ಮೀಕಾಂತ್, ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಡಾ.ನರಸಿಂಹರಾಜು, ಸಿಡಿಪಿಓ ಅರುಣಕುಮಾರ್ ಸೇರಿದಂತೆ ನೂರಾರು ಜನರು ಕೆಂಪೇಗೌಡ ರಥವನ್ನು ಸ್ವಾಗತಿಸಿ ತಾಲ್ಲೂಕಿನಾಧ್ಯಂತ ನಡೆಯುತ್ತಿರುವ ಮೃತ್ತಿಕೆ ಸಂಗ್ರಹಣಾ ಅಭಿಯಾನಕ್ಕೆ ಸಂಚರಿಸುತ್ತಿರುವ ಜಾಗೃತಿ ರಥವನ್ನು ಬೀಳ್ಕೊಟ್ಟರು..ಪಟ್ಟಣ ಪೋಲಿಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಸುನಿಲ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: