April 26, 2024

Bhavana Tv

Its Your Channel

ಕರೊನಾ ಪರೀಕ್ಷೆಗೆ ಒಳಗಾದ ತಬ್ಲಿಘಿ ಜಮಾತ್​ ಮುಖ್ಯಸ್ಥ, ವರದಿ ಬರುವವರೆಗೂ ನಡೆಸಲಾಗದು ಪೊಲೀಸ್ ​ವಿಚಾರಣೆ

ನವದೆಹಲಿ: ದೇಶದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನರಿಗೆ ಕರೊನಾ ಸೋಂಕು ವ್ಯಾಪಿಸಲು ಕಾರಣವಾದ ನಿಜಾಮುದ್ದೀನ್​ ಮರ್ಕಜ್​ನ ತಬ್ಲಿಘಿ ಜಮಾತ್​ನ ಮುಖ್ಯಸ್ಥ ಮೌಲಾನಾ ಸಾದ್​ಗೂ ಕರೊನಾ ಪತ್ತೆ ಪರೀಕ್ಷೆ ನಡೆಸಲಾಗಿದೆ.

ಸಾದ್​ ವಕೀಲ ಫುಜೈಲ್​ ಅಯ್ಯೂಬಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರಿಗೆ ಸೋಂಕು ಅಂಟಿರುವುದು ಪತ್ತೆಯಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಸಾದ್​ನನ್ನು ದೆಹಲಿ ಮಸೀದಿಯೊಂದರಲ್ಲಿ ಪತತ್ತೆಹಚ್ಚಲಾಗಿತ್ತು. ಬಳಿಕ 14 ದಿನಗಳ ಕ್ವಾರಂಟೈನ್​ ವಿಧಿಸಲಾಗಿತ್ತು. ಗೃಹ ಬಂಧನ ಅವಧಿ ಮುಗಿಯುತ್ತಿದ್ದಂತೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪರೀಕ್ಷೆಯ ಫಲಿತಾಂಶ ಇನ್ನಷ್ಟೇ ಬರಬೇಕಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಾದ್​ ಸಂಪರ್ಕದಲ್ಲಿದ್ದಾರೆ ಎಂದು ಅಯ್ಯೂಬಿ ಹೇಳಿದ್ದಾರೆ.

ಸಾದ್​ ವಿರುದ್ಧ ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿದ್ದು, ವಿಚಾರಣೆಗೆ ಸಿದ್ಧತೆ ನಡೆಸಿದ್ದಾರೆ. ತಲೆ ಮರೆಸಿಕೊಂಡಿದ್ದ ಸಾದ್​ಗಾಗಿ ಮಗನ ಸಮ್ಮುಖದಲ್ಲಿಯೇ ಆತನ ಮನೆಯಲ್ಲಿ ಹುಡುಕಾಟ ನಡೆಸಿದ್ದರು. ಮನೆಗೂ ಎರಡು ನೋಟಿಸ್​ ರವಾನಿಸಿದ್ದರು. ಇದಕ್ಕೆ ಸಾದ್​ ಉತ್ತರಿಸಿದ್ದಾರೆ ಎಂದು ಅಯ್ಯೂಬಿ ಹೇಳಿದ್ದಾರೆ.

ಮರ್ಕಜ್​ನಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆದಿಲ್ಲ. ಅದೊಂದು ಮಸೀದಿಯಾಗಿರುವುದರಿಂದ ವರ್ಷವಿಡೀ ನಿತ್ಯವೂ ಒಂದಿಲ್ಲೊಂದು ಧಾರ್ಮಿಕ ಚಟುವಟಿಕೆ ನಡೆಯುತ್ತಲೇ ಇರುತ್ತದೆ. ಮಸೀದಿ ಒಳಗಡೆಯೇ ನಡೆಯುವುದರಿಂದ ಇದಕ್ಕೆ ಪ್ರತ್ಯೇಕವಾಗಿ ಅನುಮತಿ ಪಡೆಯಬೇಕಿರಲಿಲ್ಲ ಎಂದು ಸಾದ್​ ತನ್ನ ವಕೀಲರ ಮೂಲಕ ತಿಳಿಸಿದ್ದ. ಹಾಗೆಯೇ ಪೊಲೀಸರ ತನಿಖೆಗೂ ಸಹಕರಿಸುವುದಾಗಿ ಹೇಳಿದ್ದ.
ಸಾದ್​ನನ್ನು ವಶಕ್ಕೆ ಪಡೆಯಲು ಮುಂದಾಗಿದ್ದ ಪೊಲೀಸರು ಈಗ ಪರೀಕ್ಷೆ ವರದಿ ಬರುವವರೆಗೂ ಕಾಯಬೇಕಿದೆ. ಒಂದು ವೇಳೆ ವರದಿಯಲ್ಲಿ ಸೋಂಕಿಗೆ ಒಳಗಾಗಿರುವುದು ಖಚಿತವಾದಲ್ಲಿ ಆಸ್ಪತ್ರೆಗೆ ದಾಖಲಾಗುವುದು ಅನಿವಾರ್ಯವಾಗುತ್ತದೆ. ಗುಣಮುಖರಾದ ಬಳಿಕವಷ್ಟೇ ಪೊಲೀಸರು ತನಿಖೆ ಮುಂದುವರಿಸಬೇಕಾಗುತ್ತದೆ.

error: