April 26, 2024

Bhavana Tv

Its Your Channel

ಮೀನುಗಾರಿಕಾ ಸಚಿವರ ನಡೆಯಿಂದ ಅಸಮಧಾನಗೊಂಡು ಮನವಿ ಪತ್ರ ಹಾಗೂ ಹೂ ಗೂಚ್ಚಗಳನ್ನು ನೀರಿಗೆ ಎಸೆದು ಮೀನುಗಾರರು ಆಕ್ರೋಶ

ಹೊನ್ನಾವರ: ತಮ್ಮ ಬೇಡಿಕೆಗಳಿಗೆ ಪರಿಹಾರ ಸಿಗಬಹುದು ಎಂದು ತೀವ್ರ ನೀರೀಕ್ಷೆಯಲ್ಲಿದ್ದ ಮೀನುಗಾರರ ಬಳಿ ಬರದೆ ಕಾರ್ಯಕ್ರಮ ರದ್ದುಗೊಳಿಸಿದ ಮೀನುಗಾರಿಕಾ ಸಚಿವರ ನಡೆಯಿಂದ ಅಸಮಧಾನಗೊಂಡು ಮನವಿ ಪತ್ರಗಳನ್ನು ಹಾಗೂ ಹೂ ಗೂಚ್ಚಗಳನ್ನು ನೀರಿಗೆ ಎಸೆದು ಮೀನುಗಾರರು ಆಕ್ರೋಶ ಹೊರಹಾಕಿದ ಘಟನೆ ಹೊನ್ನಾವರ ಕಾಸರಕೋಡ ಬಂದರಿನಲ್ಲಿ ಮಂಗಳವಾರ ನಡೆದಿದೆ.

 ಮೀನುಗಾರಿಕಾ ಸಚಿವ ಎಸ್ ಅಂಗಾರರವರು  ಸೋಮವರಾರದಿಂದ ಜಿಲ್ಲೆಯ ಬಂದರುಗಳಿಗೆ ಪ್ರವಾಸ ಆರಂಭಿಸಿದ್ದು, ಮಂಗಳವಾರ  ಕಾಸರಕೋಡ ಬಂದರಿಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು.   ಹೊನ್ನಾವರ ವಾಣಿಜ್ಯ ಬಂದರು  ನಿರ್ಮಾಣ ಸೇರಿದಂತೆ ವಿವಿಧ  ಸಮಸ್ಯೆಗಳ ಬೇಡಿಕೆ ಸಲ್ಲಿಸಲು ವಿವಿಧ ಮೀನಗಾರರ ಸಂಘಟನೆಯ ಪ್ರಮುಖರು ಕಾಸರಕೋಡ ಬಂದರಿನಲ್ಲಿ  ಸಚಿವರನ್ನು ಸ್ವಾಗತಿಸಲು ಕಾಯುತ್ತಿದ್ದರು. ಆದರೆ ಕೊನೆಗಳಿಗೆಯಲ್ಲಿ ರದ್ದಾದ ಕಾರ್ಯಕ್ರಮ ಹಿನ್ನಲೆಯಲ್ಲಿ ಈ ಆಕ್ರೋಶ ವ್ಯಕ್ತವಾಗಿದೆ,

    ಮೀನುಗಾರರು ವಿಶ್ವ ಸಾಗರ ದಿನದಂದು ಸಮುದ್ರಕ್ಕೆ ಪೂಜೆ ಸಲ್ಲಿಸಿ ಸಚಿವರಿಗೆ ನೀಡಬೇಕಿದ್ದ ಮನವಿ ಪತ್ರವನ್ನು ಸಮುದ್ರದ ನೀರಿಗೆ ಬಿಡುವ ಮೂಲಕ ಮೀನುಗಾರರು ವಿನೂತನವಾಗಿ ಪ್ರತಿಭಟನೆ ನಡೆಸಿದರು. ಸಚಿವರಿಗೆ ಸಲ್ಲಿಸಬೇಕಿದ್ದ ಮನವಿ ಪತ್ರ ಹಾಗೂ ಸ್ವಾಗತಿಸಲು ತಂದಿದ್ದ ಹೂವಿನ ಪುಷ್ಪಗುಚ್ಚವನ್ನು ಸಮುದ್ರಕ್ಕೆ ಬಿಡುವ ಮೂಲಕ ಸಚಿವರ ನಡೆಗೆ ತೀವ್ರ ಆಕ್ರೋಶ ಹೊರಹಾಕಿದರು. 
ಮೀನುಗಾರರಿಗೆ ಸರ್ಕಾರ ಘೋಷಣೆ ಮಾಡಿದ್ದ ಪರಿಹಾರದಲ್ಲಿ ಮೀನುಗಾರಿಕಾ ವಿವಿಧ ಅವಲಂಭಿತ ಕಾರ್ಮಿಕರಿಗೆ ಆದೇಶದಲ್ಲಿ ಸೂಚಿಸಿಲ್ಲ. ಪರಿಹಾರದ ಪ್ಯಾಕೇಜನಲ್ಲಿ ಗೊಂದಲ ಇದ್ದು, ಎಲ್ಲಾ ಮೀನುಗಾರಿಕಾ ಅವಲಂಭಿತ ಕಾರ್ಮಿಕರಿಗೂ ಪರಿಹಾ ನೀಡಬೇಕು ಎಂಬ ಮನವಿಯನ್ನು ಪತ್ರದಲ್ಲಿ ಉಲ್ಲೇಖ ಮಾಡಲಾಗಿತ್ತು. ಬಂದರಿನಲ್ಲಿ ಮೀನುಗಾರಿಕಾ ಮಹಿಳೆಯರ ಸಮಸ್ಯೆ, ಒಣ ಮೀನು ಒಣಗಿಸಲು ಸ್ಥಳಾವಕಾಶ ಇತ್ಯಾದಿಗಳ ಕುರಿತು ಮನವಿ ಪತ್ರವನ್ನು ಹೊನ್ನಾವರ ಮೀನುಗಾರರ ಸೊಸೈಟಿ, ಮೀನುಗಾರ ಕಾರ್ಮಿಕರ ಸಂಘ, ಪರ್ಷಿಯನ್ ಬೋಟ್ ಯೂನಿಯನ್‌ಗಳು ಮನವಿ ಸಲ್ಲಿಸಿ ತಮ್ಮ ಸಮಸ್ಯೆ ಬಗ್ಗೆ ಸಚಿವರ ಗಮನಕ್ಕೆ ತರುವುದಕ್ಕೆ ಸಿದ್ಧವಾಗಿದ್ದರು. ಆದರೆ ಸಚಿವರು ಕಾಸರಕೋಡ ಭಾಗಕ್ಕೆ ಮುಖ ಮಾಡದೇ ಉಡುಪಿ ಜಿಲ್ಲೆಗೆ ಹೊರಟು ಹೋಗಿರುವುದು ಮೀನುಗಾರರನ್ನು ತಿರಸ್ಕರಿಸಿದ್ದಾರೆ ಎಂದು ಮೀನುಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಸಂದರ್ಭದಲ್ಲಿ ಹೊನ್ನಾವರ ಪರ್ಸಿನ್ ಬೋಟ್ ಮಾಲೀಕರ ಸಂಘಧ ಅಧ್ಯಕ್ಷ ಹಮ್ಜಾ ಪಟೇಲ್, ಕರಾವಳಿ ಕಾರ್ಮಿಕ ಸಂಘದ ಉಪಾಧ್ಯಕ್ಷ ರಾಜೇಶ ತಾಂಡೇಲ್, ಸಗಟು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗಣಪತಿ ತಾಂಡೇಲ್, ಪರ್ಸೀನ್ ಬೋಟ ಮಾಲೀಕರ ಸಂಘದ ಕಾರ್ಯದರ್ಶಿ ವಿವನ್ ಫರ್ನಾಂಡಿಸ್, ಕರಾವಳಿ ಕಾರ್ಮಿಕ ಸಂಘದ ಕಾರ್ಯದರ್ಶಿ ರಾಜು ತಾಂಡೇಲ್, ಗ್ರಾಮ ಪಂಚಾಯತ ಸದಸ್ಯೆ ಪ್ರೀತಿ ತಾಂಡೇಲ್, ಫೇಲಿಕ್ಸ್ ಫರ್ನಾಂಡಿಸ್, ಬೆಳಕೊಂಡ ಮೀನುಗಾರರ ಸಂಘದ ಅಧ್ಯಕ್ಷ ದಾಮೋದರ ಪಟೇಲ್ ಮುಂತಾದವರು ಉಪಸ್ಥಿತರಿದ್ದರು.

 ಹೊನ್ನಾವರ ಕಾಸರಕೋಡು ಟೊಂಕದಲ್ಲಿ ನಿರ್ಮಾಣವಾಗುತ್ತಿರುವ ವಾಣಜ್ಯ ಬಂದರು ವಿವಾದ ವರ್ಷಗಳಿಂದ ನಡೆಯುತ್ತಿದೆ. ಬಂದರು ಬಳಿಯಲ್ಲಿಯೇ ಹೊನ್ನಾವರ ಪೋರ್ಟ್ ಕಂಪನಿ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಖಾಸಗಿ ವಾಣಜ್ಯ ಬಂದರು ನಿರ್ಮಾಣ ಮಾಡುತ್ತಿದೆ. ಇದಕ್ಕೆ ಮೀನುಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ವಿವಾದ ಈಗ ಶ್ರೇಷ್ಠ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಸಚಿವರಿಗೆ ಮೀನುಗಾರರು ಮನವಿ ಪತ್ರ ಸಲ್ಲಿಸುತ್ತಾರೆ ಮತ್ತು ಸ್ಥಳದಲ್ಲಿ ಗೊಂದಲ ಸೃಷ್ಠಿಯಾಗಲಿದೆ ಎನ್ನುವ ವಿಷಯವನ್ನು ಸಚಿವರ ಆಪ್ತ ಮೂಲಗಳು ತಪ್ಪಾಗಿ ಮಾಹಿತಿ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ.
error: