ಹೊನ್ನಾವರ ತಾಲೂಕಿನ ಕೊಡಾಣಿಯಲ್ಲಿ ನಡೆದ ಕರ್ಯಕ್ರಮದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆಯವರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಯಕ್ಷ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಿದರು.ತೋಟಿ ಗಣಪತಿ ಹೆಗಡೆ ಅಭಿನಂದನಾ ನುಡಿಗಳನ್ನಾಡಿದರು. .
ಕೊಂಡದಕುಳಿ ರಾಮಚಂದ್ರ ಹೆಗಡೆ ಅವರು ಸಂಪ್ರದಾಯವನ್ನು ಮೀರದೇ ಯಕ್ಷಗಾನೀಯ ಚೌಕಟ್ಟಿನಲ್ಲಿಯೇ ಕೆಲಸ ಮಾಡುತ್ತಿರುವ ಅಪರೂಪದ ಕಲಾವಿದ ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ತಾಲೂಕಿನ ಕೊಡಾಣಿಯ ಸಾರ್ವಜನಿಕ ಗಣೇಶೋತ್ಸವ ಸಭಾಭವನದಲ್ಲಿ ಸದ್ಗುರು ಗೆಳೆಯರ ಬಳಗದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಖ್ಯಾತ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ‘ಅರವತ್ತರ ಅರಳು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೊಂಡದಕುಳಿ ಅಪರೂಪದ ಕಲಾವಿದ ಒಳ್ಳೆಯ ಕಲಾವಿದರು, ಸಂಪ್ರದಾಯಬದ್ದ ಕಲಾವಿದರನ್ನು ಕಂಡಾಗ ಖುಷಿ ಆಗುತ್ತದೆ. ಕೊಂಡದಕುಳಿಯವರು ನವರಸ ಅಭಿನಯದಲ್ಲಿ ಪರಿಣಿತರು, ಮುಖವರ್ಣಿಕೆ, ನೈಜ ಸೌಂದರ್ಯ, ಅದ್ಭುತ ಕಲಾವಿರದಲ್ಲಿರಬೇಕಾದ ಎಲ್ಲ ಅರ್ಹತೆ ಅವರಲ್ಲಿದೆ ಎಂದರು.
ಉತ್ತರ ಕನ್ನಡ ಸಶಕ್ತವಾದ ಕಲಾವಿದರನ್ನು ಯಕ್ಷಗಾನ ರಂಗಕ್ಕೆ ಕೊಟ್ಟಿದೆ. ಯಕ್ಷಗಾನಕ್ಕೆ ಸರಕಾರ ಸೂಕ್ತವಾದ ಶಕ್ತಿಕೊಡಬೇಕಿದೆ ಎಂದರು.
ಶಾಸಕ ಸುನೀಲ ನಾಯ್ಕ ಲಾಂಛನ, ಪೂರ್ಣಚಂದ್ರ ರಂಗಸ್ಥಳ ಅನಾವರಣ ಮಾಡಿ ಮಾತನಾಡಿ, ಕೊಂಡದಕುಳಿ ರಾಮಚಂದ್ರ ಹೆಗಡೆ ಅವರು ಜನಮೆಚ್ಚಿದ ಕಲಾವಿದ, ಯಕ್ಷಗಾನದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಎಂದರು.
ಆರ್ ಜಿ ಭಟ್ ವರ್ಗಾಸರ್, ಸಂತೋಷ ಯಾಜಿ, ಯಕ್ಷಗಾನ ಚಿಂತಕ ಮೋಹನ ಭಾಸ್ಕರ ಹೆಗಡೆ, ಕುಮಟಾದ ಯಕ್ಷಗಾನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಜಿ.ಎಲ್.ಹೆಗಡೆ, ಕೊಡಾಣಿ ವಿಎಸ್ಎಸ್ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ, ಗ್ರಾ.ಪಂ.ಅಧ್ಯಕ್ಷೆ ಚೇತನಾ ಮಡಿವಾಳ, ಕೆನರಾ ಮಲೆನಾಡು ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ ನಿರ್ದೇಶಕ ಆರ್. ಎನ್. ಹೆಗಡೆ, ಕೊಡಾಣಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧಕ್ಷ ಮಂಜು ಶಂಭು ಗೌಡ, ಯಕ್ಷಗಾನ ಸಂಘಟಕ ರಾಜು ಭಂಡಾರಿ ,ಪಾಲ್ಗೊಂಡಿದ್ದರು.
ಪ್ರೋತ್ಸಾಹಧನ: ವಿದ್ಯಾರ್ಥಿನಿ ತೇಜಸ್ವಿನಿ ಮಹಾಬಲೇಶ್ವರ ಭಟ್ಟ ಬೆಣ್ಣೆಮನೆ ಮಾಳ್ಕೋಡ ಹಾಗೂ ವಿದ್ಯಾರ್ಥಿ ಸೂರಜ್ ರಾಮಚಂದ್ರ ನಾಯ್ಕ ಬೇರಂಕಿ ಇವರಿಗೆ ತಲಾ 60 ಸಾವಿರ ರೂ. ಪ್ರೋತ್ಸಾಹಧನ ವಿತರಿಸಲಾಯಿತು.
ಉಪನ್ಯಾಸಕ ಪ್ರಶಾಂತ ಹೆಗಡೆ ಮೂಡಲಮನೆ ನಿರೂಪಿಸಿದರು. ರಾಜಶೇಖರ ಹೆಬ್ಬಾರ ಐರೋಡಿ ಸ್ವಾಗತಿಸಿದರು. ಡಾ.ಜಿ.ಕೆ.ಹೆಗಡೆ ಹರಿಕೇರಿ ಪ್ರಾಸ್ತಾವಿಕ ಮಾತನಾಡಿದರು. ಗಣೇಶ ಯಾಜಿ ಮತ್ತು ಸಂಗಡಿಗರು ಯಕ್ಷಗಾನೀಯ ಶೈಲಿಯಲ್ಲಿ ಪ್ರಾರ್ಥನೆ ಹಾಡಿದರು. ವಿದ್ವಾನ್ ಮಂಜುನಾಥ ಭಟ್ ಕೊಂಡದಕುಳಿ ವಂದಿಸಿದರು.
More Stories
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ
ಯಕ್ಷರಂಗದ ಅಪ್ರತಿಮ ಭಾಗವತ ದಿ. ಸುಬ್ರಮಣ್ಯ ಧಾರೇಶ್ವರ-ವಿ. ಕೆ. ಭಟ್