ಕುಮಟಾ: ನಮ್ಮ ದೇಶದ ಸೈನಿಕರು ತಮ್ಮ ಪ್ರಾಣ ಸಮರ್ಪಿಸಲು ಸೈನ್ಯಕ್ಕೆ ಸೇರುತ್ತಿಲ್ಲ. ದೇಶದ್ರೋಹಿಗಳನ್ನು ಸದೆ ಬಡೆಯಲು ಹುತಾತ್ಮರಾಗುತ್ತಿದ್ದಾರೆ. ಅವರ ಸವಿ ನೆನಪಿಗೆ ಜಿಲ್ಲೆಯಲ್ಲೊಂದು ಸೈನ್ಯ ವನ ನಿರ್ಮಾಣ ಮಾಡಲಾಗುತ್ತಿದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸುಲಿಬೆಲೆ ಹೇಳಿದರು.
ಅವರು ಕುಮಟಾ ಪಟ್ಟಣದ ತೋಟಗಾರಿಕಾ ಇಲಾಖೆಗೆ ಸೇರಿದ ಖಾಲಿ ಜಾಗದಲ್ಲಿ ಯುವಾ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡ ಸೈನ್ಯವನ ನಿರ್ಮಾಣ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿ ಗೌಡ ಅವರನ್ನು ಸನ್ಮಾನಿಸಿ ಮಾತನಾಡಿದರು.
ನಮ್ಮ ದೇಶದ ರಕ್ಷಣೆಗಾಗಿ ಹಲವಾರು ಸೈನಿಕರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಇಂದಿನ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವಂತಾಗಬೇಕು. ನಮ್ಮ ದೇಶದಲ್ಲಿ ಸುಮಾರು ೨೭೭ ಸೈನಿಕರು ಹುತಾತ್ಮರಾಗಿದ್ದಾರೆ. ಅವರ ಸವಿ ನೆನಪಿಗೆ ಜಿಲ್ಲೆಗೊಂಡು ಸೈನ್ಯ ವನ ನಿರ್ಮಾಣ ಮಾಡಲಾಗುತ್ತದೆ. ಒಂದೊAದು ಮರಕ್ಕೆ ಸೈನಿಕನ ಹೆಸರು ಇಟ್ಟು ಮತ್ತು ಅವರ ಸಂಪೂರ್ಣ ವಿವರಣೆ ಇರಲಿದೆ. ಅಲ್ಲದೇ ವನದ ಮಧ್ಯ ಭಾಗದಲ್ಲಿ ಸ್ಮಾರಕ ಭವನ ನಿರ್ಮಾಣ ಮಾಡಲಾಗುತ್ತದೆ. ಈ ಕಾರ್ಯಕ್ರಮಲ್ಲಿ ತರುಣ-ತರುಣಿಯರು ಹೆಚ್ಚಿನ ಪ್ರಮಾಣದಲ್ಲಿ ಕೈಜೋಡಿಸಬೇಕು ಎಂದು ವಿನಂತಿಸಿದರು.
ನಿವೃತ್ತ ಕರ್ನಲ್ ಅನಂತ ಮಾಸೂರರ್ಕರ್ ಮಾತನಾಡಿ, ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಇಂದಿನ ಯುವಕರಲ್ಲಿ ದೇಶಪ್ರೇಮ ಕಡಿಮೆಯಾಗುತ್ತಿರುವುದು ವಿಷಾದನೀಯ. ಸೈನ್ಯ ಮತ್ತು ಸೈನಿಕರ ಮಹತ್ವದ ಬಗ್ಗೆ ತಿಳಿದುಕೊಂಡು ದೇಶ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಸಸಿಗಳನ್ನು ನೆಡುವುದು ಎಷ್ಟು ಮುಖ್ಯವೋ ಇರುವ ಸಸ್ಯಗಳ ಸಂಪತ್ತನ್ನು ರಕ್ಷಿಸಿಕೊಂಡು ಮುಂದಿನ ಪೀಳಿಗೆಗೆ ನೀಡುವುದು ಅಷ್ಟೇ ಮುಖ್ಯವಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಬೃಹತ್ ಯೋಜನೆಗಳು ನಮ್ಮ ಪರಿಸರವನ್ನು ನಾಶ ಮಾಡುತ್ತಿವೆ. ಅಲ್ಲದೇ ಈ ಯೋಜನೆಗಳನ್ನು ರಾಜಕಾರಣಿಗಳು ಹಣ ಮಾಡುವ ದಂದೆಯನ್ನಾಗಿ ಮಾಡಿಕೊಂಡಿದ್ದಾರೆ. ಇವೆಲ್ಲವುಗಳಿಗೆ ಯುವಕರು ಕಡಿವಾಣ ಹಾಕುವ ಅನಿವಾರ್ಯವಿದೆ ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಜಿಲ್ಲೆಯ ವೃಕ್ಷಮಾತೆ ತುಳಸಿ ಗೌಡ ಹೆಸರಿನಲ್ಲಿ ಸೈನಿಕ ವನದಲ್ಲಿ ಮೊದಲನೆಯ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ತುಳಸಿ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಾಜಿ ಸೈನಿಕ ಪಿ.ಎಂ.ನಾಯ್ಕ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ವಿ.ಎಸ್.ನಾಯ್ಕ, ಮಹಾ ರಕ್ಷಕದ ರಾಜ್ಯ ಸಂಚಾಲಕ ಹರ್ಷ, ಪ್ರಮುಖರಾದ ಜಿ.ಕೆ.ಹೆಗಡೆ, ಲಕ್ಕಣ್ಣ ಹೆಗಡೆ, ಯುವಾ ಬ್ರಿಗೇಡ್ನ ಅಣ್ಣಪ್ಪ ನಾಯ್ಕ ಸೇರಿದಂತೆ ಡಾ.ಎ.ವಿ.ಬಾಳಿಗಾ ಕಾಲೇಜಿನ ಎನ್.ಸಿ.ಸಿ ಹಾಗೂ ಎನ್.ಎಸ್.ಎಸ್ ಘಟಕದ ಸ್ವಯಂ ಸೇವಕರು, ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ