May 16, 2024

Bhavana Tv

Its Your Channel

ಮನೆ,ಮನೆಯಲ್ಲಿ ಕನ್ನಡ ರಕ್ಷಿಸುವ ಕೆಲಸವಾಗಲಿ: ಜಿ.ಎಲ್.ಹೆಗಡೆ

ವರದಿ: ವೇಣುಗೋಪಾಲ ಮದ್ಗುಣಿ

ಕುಮಟಾ: ಮನೆ,ಮನೆಯಲ್ಲಿ ಕನ್ನಡವನ್ನು ರಕ್ಷಿಸುವ ಕೆಲಸವಾಗಬೇಕು ಎಂದು ಯಕ್ಷಗಾನ ಅಕಾಡಮಿ ಅಧ್ಯಕ್ಷ ಡಾ.ಜಿ.ಎಲ್ ಹೆಗಡೆ ಹೇಳಿದರು.
ಪಟ್ಟಣದ ನಾದಶ್ರೀ ಕಲಾ ಕೇಂದ್ರದಲ್ಲಿ ಭಾನುವಾರ ಸಂಜೆ ನೂತನವಾಗಿ ಅಸ್ತಿತ್ವಕ್ಕೆ ಬಂದ “ಕುಮಟಾ ಕನ್ನಡ ಸಂಘ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂಗ್ಲೀಷ ಭಾಷೆ ಅತಿಯಾಗಿ ನುಸುಳುವಿಕೆಯಿಂದ ಕನ್ನಡ ಭಾಷೆ ಹಿನ್ನೆಲೆಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಪರ ಊರಿಗೆ ಹೋಗಿ ಬಂದರೂ ನಮ್ಮ ಮಾತೃ ಭಾಷೆ ಬದಲಾಗಬಾರದು. ಆಡು ನುಡಿಯಲ್ಲೇ ಭಾಷೆ ಬಳಕೆಯಾದಾಗ ಕನ್ನಡ ಇನ್ನಷ್ಟು ಗಟ್ಟಿಯಾಗಿ ನೆಲೆಯುರಲು ಸಾಧ್ಯ.ಸಮೃದ್ದವಾಗಿರುವ ನಮ್ಮ ಕನ್ನಡ ಭಾಷೆ,ಉಳಿಸಿ,ಬೆಳೆಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ. ಈ ದಿಶೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಕುಮಟಾ ಕನ್ನಡ ಸಂಘ ಕಾರ್ಯೊನ್ಮುಖವಾಗಲಿ. ಪ್ರಸ್ತುತ ಕನ್ನಡದ ಬಗ್ಗೆ ಅಸಡ್ಡೆ ತೊರುತ್ತಿರುವುದು ವಿಪರ್ಯಾಸ. ಯಕ್ಷಗಾನ ಕಲೆ ಕನ್ನಡ ಭಾಷೆಗೆ ತಾಯಿ ಬೇರು ಇದ್ದಂತೆ. ಇಂತಹ ಅದ್ಭುತ ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸುವ ಮೂಲಕ ಕನ್ನಡ ಭಾಷೆಯನ್ನು ಉಳಿಸಲು ಸಾಧ್ಯ. ಕನ್ನಡ ಸಂಘ ಕೇವಲ ಭಾಷೆಯ ಉಳಿಸುವಿಗೆ ಪೂರಕವಾಗಿ ಕೆಲಸ ಮಾಡಲಿ. ತನ್ಮೂಲಕ ಕುಮಟಾ ಕನ್ನಡ ಸಂಘವು ರಾಜ್ಯದಲ್ಲಿ ಮಾದರಿ ಸಂಘವಾಗಿ ರೂಪುಗೊಳ್ಳಲಿ ಎಂದು ಹಾರೈಸಿದರು.
ಬಾಳಿಗಾ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಎಮ್.ಡಿ.ನಾಯ್ಕ ಮಾತನಾಡಿ ಕನ್ನಡ ಭಾಷೆಯ ಉಳಿವಿಗಾಗಿ ಸಂಘಟಿತ ಹೋರಾಟ ಅಗತ್ಯ. ಅನ್ಯ ಭಾಷೆಯ ಅನುಕರಣೆಯೊಂದಿಗೆ ಮಾತೃ ಭಾಷೆಯ ಸರ್ವತೊಮುಖ ಅಭಿವೃದ್ದಿಗೆ ಮುಂದಾಗೋಣ. ಈ ದಿಶೆಯಲ್ಲಿ ಕುಮಟಾ ಕನ್ನಡ ಸಂಘ ಕನ್ನಡ ಭಾಷೆಯ ಉಳಿಸುವಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವಂತಾಗಲಿ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹರೀಶ ಗಾಂವಕರ ಮಾತನಾಡಿ ಪ್ರತಿ ಮನೆಯಲ್ಲೂ ಕನ್ನಡ ಭಾಷೆ ರಾರಾಜಿಸುವಂತಾಗಲಿ. ಈ ಬಗ್ಗೆ ಕುಮಟಾ ಕನ್ನಡ ಸಂಘ ದಿಟ್ಟ ಹೆಜ್ಜೆಯಿಟ್ಟು ಭಾಷೆಯ ಉಳಿಸುವಿಕೆಗೆ ಕಟಿಬದ್ದವಾಗಲಿ ಎಂದರು.
ಕುಮಟಾ ಕನ್ನಡ ಸಂಘದ ಅಧ್ಯಕ್ಷ ಸದಾನಂದ ದೇಶಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ತೆರೆಮರೆಯಲ್ಲಿರುವ ಕನ್ನಡದ ಸುಮನಸುಗಳ ಸಾಹಿತ್ಯವನ್ನು ಹೊರ ಜಗತ್ತಿಗೆ ಅನಾವರಣಗೊಳಿಸುವ ಉದ್ದೇಶದಿಂದ ಸಂಘವನ್ನು ಹುಟ್ಟುಹಾಕಲಾಗಿದೆ. ಹಳ್ಳಿ ಹಳ್ಳಿಯಲ್ಲಿ ಕನ್ನಡದ ಕುರಿತು ಜಾಗೃತಿ ಮೂಡಿಸಿ ಭಾಷೆಯ ಅಭಿವೃದ್ದಿ ಪ್ರತಿಯೊಬ್ಬರು ಪ್ರಾಮಾಣಿಕ ಪ್ರಯತ್ನ ಮಾಡುವಂತಾಗಲಿ. ಈ ದಿಶೆಯಲ್ಲಿ ಎಲ್ಲರ ಸಹಕಾರ ಇರಲಿ ಎಂದರು.
ನಾಗರೀಕ ವಾರಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿಹೆಬ್ಬಾರ,ಯಲ್ಲಾಪುರದ ಸಾಮಾಜಿಕ ಕಾರ್ಯಕರ್ತ ವೇಣುಗೋಪಾಲ ಮದ್ಗುಣಿ ಮಾತನಾಡಿ ಸಂಘದಲ್ಲಿ ಎಲ್ರೂ ಒಟ್ಟಾಗಿ ಕೆಲಸ ಮಾಡಬೇಕು.ಸಣ್ಣ ಪುಟ್ಟ ವಿಷಯಗಳಿಗೆ ಅಭಿಪ್ರಾಯ ಭೇದವಿರುವುದು ಸಹಜ ಅದನ್ನು ದಾಟಿ ಮುನ್ನಡೆಯಬೇಕೆಂದರು.
ಈ ಸಂದರ್ಭದಲ್ಲಿ “ಕನ್ನಡದ ವಿಜಯಶಾಲಿ” ವಿಶೇಷ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು.
ಸಂಘದ ಉಪಾಧ್ಯಕ್ಷೆ ಡಾ.ಪ್ರತಿಭಾ ಭಟ್ಟ ಸ್ವಾಗತಿಸಿದರು. ಕಾರ್ಯ ದರ್ಶಿ ಮುಂಜುನಾಥ ಗಾಂವಕರ ಬರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಶಿಕ್ಷಕ ಆರ್.ಎನ್.ಹೆಗಡೆ ವಂದಿಸಿದರು. ಶಿಕ್ಷಕ ಗಣೇಶ ಜೋಶಿ ನಿರೂಪಿಸಿದರು.
ಡಾ.ಎಮ್.ಆರ್.ನಾಯಕ, ಸಾಹಿತಿ ತಿಗಣೇಶ ಮಾಗೋಡ, ಜಯದೇವ ಬಳಗಂಡಿ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: