ಕೆ.ಆರ್.ಪೇಟೆ :- ತಮ್ಮ ವೃತ್ತಿ ಕೌಶಲ್ಯದ ಮೂಲಕ ಸ್ವಾವಲಂಬಿಗಳಾಗಿ ಸಧೃಡ ಜೀವನ ನಡೆಸುತ್ತಿರುವ ಟೈಲರ್ ಗಳು ಸಂಘಟಿತರಾಗಿ ಸರ್ಕಾರದಿಂದ ದೊರೆಯಬಹುದಾದ ಸಂವಿಧಾನಬದ್ಧ ಸೌಲಭ್ಯಗಳನ್ನು ಪಡೆದುಕೊಂಡು ಪ್ರಗತಿಯ ದಿಕ್ಕಿನತ್ತ ಸಾಗಬೇಕು ಎಂದು ಕೆ.ಆರ್.ಪೇಟೆ ತಾಲ್ಲೂಕು ಟೈಲರಿಂಗ್ ಅಸೋಸಿಯೇಷನ್ ಅಧ್ಯಕ್ಷ ಮಂಜುನಾಥ್ ಕರೆ ನೀಡಿದರು …
ಅವರು ಇಂದು ಕೆ.ಆರ್.ಪೇಟೆ ಪಟ್ಟಣದಲ್ಲಿ ಟೈಲರ್ ಗಳ ದಿನಾಚರಣೆಯ ಅಂಗವಾಗಿ ಟೈಲರಿಂಗ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಜಾಗೃತಿ ಮೆರವಣಿಗೆ ಹಾಗೂ ವೃತ್ತಿ ಕೌಶಲ್ಯ ಮಾರ್ಗದರ್ಶನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು..
ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ವೃತ್ತಿನಿರತ ಟೈಲರ್ ಗಳಿಗೆ ನಮ್ಮ ಪಟ್ಟಣಗಳು ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಬೇಡಿಕೆಯಿದೆ. ಟೈಲರ್ ಗಳು ತಮ್ಮ ವೃತ್ತಿಕೌಶಲ್ಯದ ಮೂಲಕ ಕಷ್ಟಪಟ್ಟು ಗಳಿಸಿದ ಹಣವನ್ನು ವ್ಯರ್ಥವಾಗಿ ಪೋಲು ಮಾಡದೇ ಕೂಡಿಟ್ಟು ಜೋಪಾನ ಮಾಡಬೇಕು ಎಂದು ಮನವಿ ಮಾಡಿದ ಮಂಜುನಾಥ್ ಕೋವಿಡ್ ಸಂಕಷ್ಟದ ಸಮಯದಲ್ಲಿ ಟೈಲರ್ ಗಳು ಕೆಲಸವಿಲ್ಲದೇ ಭಾರೀ ತೊಂದರೆಗೆ ಸಿಕ್ಕಿಬಿದ್ದಿದ್ದರೂ ಸಹಾಯ ಹಸ್ತವನ್ನು ಚಾಚದೇ ಸರ್ಕಾರವು ಕೈಚೆಲ್ಲಿದ್ದು ನೋವುಂಟು ಮಾಡಿದೆ. ದುಡಿಮೆಯಲ್ಲಿ ದೇವರನ್ನು ಕಾಣುತ್ತ ಸೇವಾ ಮನೋಭಾವನೆಯಿಂದ ಕೆಲಸ ಮಾಡುತ್ತಿರುವ ಟೈಲರ್ ಗಳಿಗೆ ರಾಜ್ಯ ಸರ್ಕಾರವು ಮಾನವೀಯ ನೆಲೆಗಟ್ಟಿನ ಆಧಾರದ ಮೇಲೆ ಸಹಾಯ ಹಸ್ತವನ್ನು ಚಾಚಬೇಕು ಎಂದು ಮನವಿ ಮಾಡಿದರು.. ವೃತ್ತಿನಿರತ ಟೈಲರ್ ಗಳು ಅಸೋಸಿಯೇಷನ್ ಸದಸ್ಯರಾಗಿ ಸಂಘದ ಸದಸ್ಯತ್ವ ಪಡೆದುಕೊಂಡು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾಧಿಸಿ ತೋರಿಸಬೇಕು ಎಂದು ಮಂಜುನಾಥ್ ಹೇಳಿದರು..
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಶ್ಯಾಮ್, ಕುಮಾರ್, ಈಶ್ವರ್, ರಮೇಶ್, ಸುಮಲತಾ, ಟಿ.ವೈ.ಆನಂದ್, ವಿ.ಲೋಕೇಶ್, ವೈ.ಸದಾಶಿವ, ದೇವರಾಜು, ಅಶೋಕ್ ಸೇರಿದಂತೆ ನೂರಾರು ಟೈಲರ್ ಗಳು ಜಾಗೃತಿ ಮೆರವಣಿಗೆ ಹಾಗೂ ಟೈಲರಿಂಗ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ.
ಕೃಷ್ಣರಾಜಪೇಟೆ, ಮಂಡ್ಯ.
More Stories
ತಮಟೆಯ ಸದ್ದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ರಂಗ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು..
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ