ಕುಮಟಾ : ಮಾರ್ಚ ೩೧ : ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಮಹಾತ್ಮಾಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಬೆಂಗಳೂರು ಮತ್ತು ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜು ಕುಮಟಾ ಇವರ ಜಂಟಿ ಸಹಭಾಗಿತ್ವದಲ್ಲಿ ೩ ದಿನಗಳ ಸೌರ ಶಕ್ತಿ ತಂತ್ರಜ್ಞಾನ, ಸೌರ ಉಪಕರಣಗಳ ರಿಪೇರಿ ಮತ್ತು ನಿರ್ವಹಣೆ ತರಬೇತಿಯನ್ನು ಸ್ಥಳೀಯ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಆಯೋಜಿಸಲಾಗಿತ್ತು.
ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ಕೆನರಾ ಕಾಲೇಜು ಸೊಸೈಟಿಯ ಚೆಯರ್ಮನ್ ದಿನಕರ ಮಾಧವ ಕಾಮತ್ ದೀಪಬೆಳಗಿಸಿ ಉದ್ಘಾಟಿಸಿದರು. ತದನಂತರ ಅವರು ಮಾತನಾಡಿ ಸೌರ ಶಕ್ತಿ ಸೂರ್ಯನಿಂದ ಸಿಗುವ ಉಚಿತ ಶಕ್ತಿಯ ಮೂಲವಾದರೂ ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ತಾಂತ್ರಕತೆ ಈಗ ತಾನೇ ಅಭಿವೃದ್ಧಿಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ತಾಂತ್ರಿಕ ಸಂಸ್ಥೆಗಳ ಜವಾಬ್ದಾರಿ ಹೆಚ್ಚಾಗಿದ್ದು ಮುಂದಿನ ದಿನಗಳು ಸೌರ ಶಕ್ತಿಯ ದಿನಗಳು ಎಂದೇ ಪರಿಗಣಿಸಬೇಕು, ತಾಂತ್ರಿಕ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸೌರ ಕ್ಷೇತ್ರದಲ್ಲಿ ಉದ್ಯೋಗ, ಸ್ವ ಉದ್ಯೋಗದ ಅವಕಾಶಗಳು ವ್ಯಾಪಕವಾಗಿ ಲಭ್ಯವಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೆನರಾ ಕಾಲೇಜು ಸೊಸೈಟಿಯ ಕಾರ್ಯದರ್ಶಿಗಳಾದ ಸುಧಾಕರ್ ನಾಯಕ್ ಸೌರ ದೀಪ ಬೆಳಗಿಸಿದರು. ತದನಂತರ ಮಾತನಾಡಿ ಪೆಟ್ರೋಲ್, ಡೀಸಿಲ್ ಉಪಯೋಗಿಸುವುದರಿಂದಾಗುತ್ತಿರುವ ಹಾನಿಯನ್ನು ನಾವೆಲ್ಲ ಮನಗಾಣುತ್ತಿದ್ದೇವೆ. ಅತಿಯಾದ ಮಳೆ, ಮಿತಿಮೀರಿದ ಸೆಖೆ ಇವುಗಳು ಪ್ರಕೃತಿ ನಮಗೆ ನೀಡುವ ಸಣ್ಣ ಎಚ್ಚರಿಕೆ ಎಂದು ಭಾವಿಸಬೇಕು. ಈಗಲಾದರೂ ನಾವು ಸಸ್ಯ ಸಂಪತ್ತನ್ನು ಉಳಿಸಿಕೋಳ್ಳುವುದು, ನವೀಕರಿಸಬಹುದಾದ ಇಂಧನವನ್ನು ಉಪಯೋಗಿಸುದನ್ನು ವ್ಯಾಪಕಗೊಳಿಸದಿದ್ದಲ್ಲಿ ಮುಂದೆ ಇಡೀ ಭೂಮಂಡಲದ ಜೀವರಾಶಿಗಳ ಅಳಿವು ಉಳಿವಿನ ಪ್ರಶ್ಣೆ ಮೂಡಲಿದೆ ಎಂದು ಎಚ್ಚರಿಸಿದರು. ಭಾರತೀಯ ವಿಕಾಸ ಟ್ರಸ್ಟಿನ ಮುಖ್ಯ ವ್ಯವಸ್ಥಾಪಕರ ಮನೋಹರ ಕಟ್ಗೇರಿ, ವಿದ್ಯಾಧಿರಾಜ ಕಾಲೇಜಿನ ಪ್ರಾಂಶುಪಾಲ ರತನ್ ಗಾ೦ವ್ಕರ, ಸಂಗಮ ಸೇವಾ ಸಂಸ್ಥೆಯ ಮುಖ್ಯಸ್ಥ ರವೀಂದ್ರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜಿನ ೬೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ೩ ದಿನದ ತರಬೇತಿಯಲ್ಲಿ ಭಾಗವಹಿಸಿ ಪ್ರಮಾಣ ಪತ್ರ ಪಡೆದುಕೊಂಡರು.
More Stories
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ
ಮುಂಡಗೋಡ ತಾಲೂಕಿನಲ್ಲಿ ನಡೆದ ಆರನೇಯ ಕನ್ನಡ ಸಾಹಿತ್ಯ ಸಮ್ಮೇಳನ