ದಾಂಡೇಲಿಯ ಕಾಳಿ ನದಿಯಲ್ಲಿ ಮೀನು ಹಿಡಿಯಲು ತೆರಳಿದಾಗ ಮೊಸಳೆ ಪಾಲಾಗಿದ್ದ ಬಾಲಕನ ಶವ ಕೊನೆಗೂ ಎರಡು ದಿನಗಳ ಬಳಿಕ ದಾಂಡೇಲಿಯ ವಿನಾಯಕ ನಗರದಲ್ಲಿ ಇಂದು ಪತ್ತೆಯಾಗಿದೆ.
ಮೊಹಿನ್ ಮೆಹಬೂಬ್ ಅಲಿ(೧೫) ಮೃತ ದುರ್ದೈವಿ ಬಾಲಕ. ವಿನಾಯಕನಗರದ ಬಳಿ ಕಾಳಿ ನದಿ ದಂಡೆಯಲ್ಲಿ ಮೀನು ಹಿಡಿಯುತ್ತಿರುವಾಗ ದಾಳಿ ಮಾಡಿದ ಮೊಸಳೆ ಬಾಲಕನನ್ನು ಎಳೆದೊಯ್ದಿದಿತ್ತು. ಒಂದೆರಡು ಬಾರಿ ನದಿಯಲ್ಲಿ ಬಾಲಕನನ್ನು ಮೇಲಕ್ಕೆ ಎತ್ತಿ ಮುಳುಗಿಸಿದ್ದ ಮೊಸಳೆ ಮತ್ತೆ ಬಾಲಕನ ಸುಳಿವು ಪತ್ತೆಯಾಗಿರಲಿಲ್ಲ. ಬಾಲಕನಿಗಾಗಿ ಸ್ಥಳೀಯರು ತೆಪ್ಪದ ಮೂಲಕ ಮತ್ತು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೋಟ್ ಗಳ ಮೂಲಕ ಹುಡುಕಾಟ ನಡೆಸಿದ್ದರು. ಆದರೂ ಪತ್ತೆಯಾಗಿರಲಿಲ್ಲ. ಇಂದು ಮತ್ತೆ ಕಾರ್ಯಾಚರಣೆ ನಡೆಸಿದಾಗ ಬಾಲಕನ ಶವ ಪತ್ತೆಯಾಗಿದೆ.
ಬಾಲಕನ ಒಂದು ಕೈ ಅನ್ನು ಮೊಸಳೆ ತಿಂದು ಹಾಕಿದೆ. ಈ ಬಗ್ಗೆ ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕ ನದಿ ದಂಡೆಯಲ್ಲಿ ನಿತ್ಯವೂ ಸಹೋದರನ ಜೊತೆ ಮೀನು ಹಿಡಿಯಲು ಬರುತ್ತಿದ್ದ ಎನ್ನಲಾಗಿದೆ. ಈ ಘಟನೆ ನಡೆದ ವೇಳೆ ಸಹೋದರ ದೂರ ಇದ್ದ. ಬಾಲಕ ನಿಂತು ಗಾಳ ಹಾಕುತ್ತಿದ್ದ ಸಮಯದಲ್ಲಿ ಮೊಸಳೆ ಏಕಾಏಕಿ ದಾಳಿ ನಡೆಸಿ, ಬಾಲಕನನನ್ನು ಹೊತ್ತೊಯ್ದಿತ್ತು.
ಈ ಬಾಲಕನ ಕುಟುಂಬ ತೀರಾ ಬಡಕುಟುಂಬವಾಗಿದ್ದು, ತಂದೆ ರಿಕ್ಷಾ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ಈ ದುರ್ಘಟನೆಯಿಂದಾಗಿ ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ,ಹಲವರು ಮನೆಗೆ ಭೇಟಿ ನೀಡಿ, ಸಾಂತ್ವನದ ಮಾತುಗಳನ್ನಾಡಿ, ಕುಟುಂಬಕ್ಕೆ ಧೈರ್ಯ ತುಂಬವ ಪ್ರಯತ್ನ ಮಾಡುತ್ತಿದ್ದಾರೆ.
ಘಟನೆಯ ಹಿನ್ನಲೆಯಲ್ಲಿ ಕಾಳಿ ನದಿ ಸಮೀಪ ನೂರಾರು ಜನರು ನೆರೆದಿದ್ದರು. ಅಲ್ಲದೆ, ಇತ್ತಿಚೆಗೆ ಕಾಳಿ ನದಿಯಲ್ಲಿ ಮೊಸಳೆಗಳ ಸಂತತಿ ಮೀತಿ ಮೀರಿದೆ ಎನ್ನಲಾಗಿದ್ದು, ಇದರಿಂದಾಗಿ ಭಾರೀ ಸಮಸ್ಯೆ ಎದುರಾಗುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ
More Stories
ದಾಂಡೇಲಿಯಲ್ಲಿ ನಡೆದ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ
ಹಣತೆಯಿಂದ ಸಾರಾ ಅಬೂಬಕ್ಕರ್ಗೆ ಅರ್ಥಪೂರ್ಣ ಗೌರವ : ಡಾ: ತೃಪ್ತಿ ನಾಯಕ
ಜ. 8 : ‘ಹಣತೆ’ ದಾಂಡೇಲಿ ತಾಲೂಕು ಘಟಕದ ಉದ್ಘಾಟನೆ