ಹೊನ್ನಾವರ : ಕೋವಿಡ್ ದೇಶದ ಮೇಲೆ ಎರಗಿದಾಗ ಮಾಸ್ಕ್, ಫೇಸ್ಶೀಲ್ಡ್ನಂತಹ ವೈದ್ಯಕೀಯ ಬಳಕೆಯ ಸಾಮಾನ್ಯ ವಸ್ತುಗಳೂ ಚೀನಾದಿಂದ ಆಯಾತವಾಗುತ್ತಿದ್ದವು. ಭಾರತಕ್ಕೆ ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗಲಿಲ್ಲ. ವೈದ್ಯಕೀಯ ಮಾತ್ರವಲ್ಲ, ಪೋಲೀಸ್ ಇತರ ಇಲಾಖೆಗಳು ಮಾಸ್ಕ್ಗಿಂತ ಹೆಚ್ಚು ಸುರಕ್ಷತೆ ಒದಗಿಸುವ ಫೇಸ್ಶೀಲ್ಡ್ಗೆ ಬೇಡಿಕೆ ಇಟ್ಟವು. ೫೦-೧೦೦ ರೂಪಾಯಿಗಳಿಗೆ ಇವು ಮಾರಾಟವಾಯಿತು. ಇದನ್ನು ಸವಾಲಾಗಿ ಸ್ವೀಕರಿಸಿದ ಹೊನ್ನಾವರ ಮೂಲದ ಬೆಂಗಳೂರು ಉದ್ಯಮಿ ಶ್ರೀರಾಮ ಭಟ್ ಚೀನಾಕ್ಕೆ ಸೆಡ್ಡು ಹೊಡೆದು ತಮ್ಮ ಶ್ರೀಮಾತಾ ಪ್ರೆಸಿಶನ್ ಕಂಪೋನೆoಟ್ ಕೈಗಾರಿಕೆಯಲ್ಲಿ ಈಗ ತಿಂಗಳಿಗೆ ೫ ವಿಧದ ಲಕ್ಷಕ್ಕೂ ಹೆಚ್ಚು ಫೇಸ್ಶೀಲ್ಡ್ಗಳನ್ನು ಕೇವಲ ೨೫ರಷ್ಟು ರೂಪಾಯಿ ಬೆಲೆಯಲ್ಲಿ ನೇರವಾಗಿ ಬಳಕೆದಾರ ಸಂಸ್ಥೆಗಳಿಗೆ ಪೂರೈಕೆ ಮಾಡುತ್ತಿದ್ದಾರೆ
ಇಲ್ಲಿಯ ಎಸ್.ಡಿ.ಎಂ. ಕಾಲೇಜಿನಲ್ಲಿ ಅರ್ಥಶಾಸ್ತ ವಿಭಾಗದ ನಿವೃತ್ತ ಪ್ರಾಧ್ಯಾಪಕ ಎಂ. ನಾರಾಯಣ ಭಟ್ ಇವರ ಮಗ ಶ್ರೀರಾಮ ಭಟ್ ಇವರು ೨೦೦೬ರಲ್ಲಿ ಆರಂಭಿಸಿದ ಈ ಸಂಸ್ಥೆ ಐಎಸ್ಓ ಮಾನ್ಯತೆ ಹೊಂದಿದ್ದು ಬೆಂಗಳೂರಿನಲ್ಲಿ ವಾಹನಗಳ ಬಿಡಿಭಾಗಗಳನ್ನು ತಯಾರಿಸುವ ಸಣ್ಣಕೈಗಾರಿಕೆಯನ್ನು ನಡೆಸುತ್ತಿದ್ದಾರೆ. ಮೈಸೂರಿನಲ್ಲಿ ಇತ್ತೀಚೆ ಇನ್ನೊಂದು ಘಟಕ ಆರಂಭಿಸಿದ್ದಾರೆ. ಲಾಕ್ಡೌನ್ ಆದಾಗ ಇವರ ಸಂಸ್ಥೆಯಲ್ಲಿ ಕೆಲಸಮಾಡುವ ನೌಕರರಿಗೆ ಉದ್ಯೋಗ ಇಲ್ಲವಾಯಿತು. ಇದೇ ಸಂದರ್ಭದಲ್ಲಿ ಫೇಸ್ಶೀಲ್ಡ್ಗೆ ಕೊರತೆಯ ವಿಷಯ ತಿಳಿದ ಶ್ರೀರಾಮ ಭಟ್ ತನ್ನ ನೌಕರರಿಗೆ ಕೆಲಸಕೊಡಲು ಇರುವ ಯಂತ್ರೋಪಕರಣಗಳನ್ನು ಮಾರ್ಪಡಿಸಿಕೊಂಡು ಕೆಲವು ಹೊಸದು ಖರೀದಿಸಿ ಫೇಸ್ಶೀಲ್ಡ್ ತಯಾರಿಕೆ ಆರಂಭಿಸಿದರು. ಈಗ ೫ ಮಾಡೆಲ್ಗಳಲ್ಲಿ ಫೇಸ್ಶೀಲ್ಡ್ ತಯಾರಿಸುತ್ತಾರೆ. ಮಕ್ಕಳಿಗಾಗಿ ಇನ್ನೊಂದು ಮಾಡೆಲ್ ಪ್ರಾಯೋಗಿಕವಾಗಿ ಸಿದ್ಧವಾಗಿದೆ. ಚೀನಾಕ್ಕಿಂತ ಅಗ್ಗದಲ್ಲಿ ಫೇಸ್ಶೀಲ್ಡ್ಗಳನ್ನು ಒದಗಿಸುವ ಶ್ರೀರಾಮ ಭಟ್ ಬೇಡಿಕೆ ಅವಲಂಭಿಸಿ ಕೈಗಾರಿಕೆಯನ್ನು ವಿಸ್ತರಿಸಿ ಮೋದಿಯವರ ಸ್ಟಾರ್ಟ್ ಅಪ್ ಅನ್ವಯ ‘ಆತ್ಮ ನಿರ್ಭರ್ ಭಾರತ’ ಕರೆಗೆ ಸ್ಪಂದಿಸಿದ್ದಾರೆ. ಫೇಸ್ಶೀಲ್ಡ್ಗಳು ಇಂದಿನ ಅಗತ್ಯವಾಗಿದ್ದು ಕೊರೊನಾ ಸೋಂಕನ್ನು ಶೇ. ೯೬ರಷ್ಟು ತಡೆಯುತ್ತದೆ ಎಂದು ಅಮೇರಿಕಾದ ವೈದ್ಯಕೀಯ ಸಂಘಟನೆ ಹೇಳಿದೆ. ಜಿಲ್ಲೆ ಶ್ರೀರಾಮ ಭಟ್ ಇವರ ಸಾಧನೆಗೆ ಜಿಲ್ಲೆ ಹೆಮ್ಮೆಪಡುತ್ತದೆ.
ಜಿ.ಯು.ಭಟ್ ವಿಶೇಷ ವರದಿ
ಹಿರಿಯ ಪತ್ರಕರ್ತರು ಹೊನ್ನಾವರ
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.