May 14, 2024

Bhavana Tv

Its Your Channel

ಪರಿಸರವನ್ನು ಕಾಯ್ದು ಕೊಳ್ಳುವುದು ನಮ್ಮ ಕರ್ತವ್ಯ-ವಿ.ಎಮ್.ಹೆಗಡೆ

ಕಾರವಾರ: ಪರಿಸರವಿಲ್ಲದೇ ಇದ್ದರೆ ನಾವು ಬದುಕಲು ಸಾಧ್ಯವಿಲ್ಲ. ಗಿಡ ನೆಡುವುದರ ಮೂಲಕ ಹಸಿರನ್ನು ಉಳಿಸಬೇಕಾಗಿದೆ. ಹಸಿರೇ ಉಸಿರಾಗಿರುವುದರಿಂದ ನಾವು ಅದನ್ನು ಹೆಚ್ಚು ಬೆಳೆಸಲು ಪ್ರಯತ್ನಿಸಬೇಕು. ಸ್ವಚ್ಛ ಪರಿಸರಕ್ಕಾಗಿ ನಮ್ಮ ಶ್ರಮದ ಅಗತ್ಯವಿದೆ. ಎಲ್ಲರೂ ಸೇರಿ ನಮ್ಮ ಪರಿಸರವನ್ನು ಸ್ವಚ್ಛ ಮತ್ತು ಶುದ್ಧವಾಗಿರಿಸಲು ಶ್ರಮಿಸೋಣ ಎಂದು ಭಾರತೀಯ ರೆಡ್‍ಕ್ರಾಸ್‍ನ ಜಿಲ್ಲಾ ಶಾಖೆಯ ಚೇರ್‍ಮೆನ್ ವಿ.ಎಮ್.ಹೆಗಡೆ ಅಭಿಪ್ರಾಯ ವ್ಯಕ್ತ ಪಡಿಸಿದರು. ಅವರು ಆಝಾದ್ ಯುಥ್ ಕ್ಲಬ್ ಕಾರವಾರದವರು ‘ವಿಶ್ವ ರೆಡ್ ಕ್ರಾಸ್ ದಿನಾಚರಣೆ’ಯ ನಿಮಿತ್ತ ಹಮ್ಮಿಕೊಂಡ ಗಿಡ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಗಿಡವನ್ನು ನೆಡುತ್ತಾ ಪರಿಸರದ ಕುರಿತು ಸಂದೇಶವನ್ನು ನೀಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮರೀನ್ ಬಯಾಲಜಿಯ ಸ್ನಾತ ಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ.ಜಗನ್ನಾಥ್ ಎಲ್.ರಾಥೋಡ ಮಾತನಾಡಿ ಮಳೆ ಬೀಳುವ ಸಂದರ್ಭದಲ್ಲಿ ಗಿಡಗಳನ್ನು ನೆಡುವುದರಿಂದ ಅವುಗಳು ಸರಿಯಾಗಿ ಬೆಳೆಯುತ್ತವೆ. ಇಂತಹ ಪರಿಸರಕ್ಕೆ ಉಪಯುಕ್ತವಾಗುವ ಕಾರ್ಯಗಳು ಎಲ್ಲರಿಂದ ಆಗಬೇಕಾಗಿದೆ. ಈ ರೀತಿಯಾಗಿ ಗಿಡಗಳನ್ನು ನೆಡುವುದರಿಂದ ಪರಿಸರ ಉಳಿಸಲು ಸಾಧ್ಯವಾಗುತ್ತದೆ. ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ರಾಷ್ಟ್ರ ಮತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಜೀರ್ ಅಹಮದ್ ಯು.ಶೇಖ್ ರವರು ಮಾತನಾಡಿ ರಸ್ತೆ ಅಭಿವೃದ್ದಿ ಸಂದರ್ಭದಲ್ಲಿ ಲಕ್ಷಾಂತರ ಮರಗಳು ನಾಶವಾಗಿವೆ. ಆದ್ದರಿಂದ ಅವಶ್ಯ ವಿರುವ ಸ್ಥಳಗಳಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ನಮ್ಮ ಪರಿಸರದ ರಕ್ಷಣೆ ಮಾಡಬೇಕಾಗಿದೆ. ಇದು ನಮ್ಮಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಅತಿಥಿಗಳಾಗಿ ಉಪಸ್ಥಿತರಿದ್ದ ದಿವೇಕರ್ ವಾಣಿಜ್ಯ ಮಹಾವಿದ್ಯಾಲಯದ ಯುಥ್ ರೆಡ್ ಕ್ರಾಸ್‍ನ ಕಾರ್ಯಕ್ರಮ ಅಧಿಕಾರಿಯಾದ ಸುರೇಶ ಗುಡ್ಡಿಮನೆ ಮಾತನಾಡಿ ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುವುದು ಒಳ್ಳೆಯ ಕಾರ್ಯಕ್ರಮ. ನೆಟ್ಟ ಗಿಡಗಳನ್ನು ಪೋಷಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೋಡಿಬಾಗದ ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ ಮತ್ತು ದಿವೇಕರ್ ವಾಣಿಜ್ಯ ಮಹಾ ವಿದ್ಯಾಲಯದ ಆವರಣದಲ್ಲಿ ಉತ್ತಮ ಗುಣ ಮಟ್ಟದ ತೆಂಗಿನ ಸಸಿಗಳನ್ನು ನೆಡಲಾಯಿತು. ಈ ಕಾರ್ಯಕ್ರಮವನ್ನು ಕ್ಲಬ್‍ನ ಕಾರ್ಯದರ್ಶಿ ಮೊಹಮ್ಮದ್ ಉಸ್ಮಾನ್ ಶೇಖ್ ಸಂಘಟಿಸಿದ್ದರು. ಈ ಸಂದರ್ಭದಲ್ಲಿ ಕ್ಲಬ್‍ನ ಮಾಜಿ ಅಧ್ಯಕ್ಷ ಜಾವೀದ್ ಎಮ್.ಶೇಖ್, ರಾಷ್ಟ್ರ ಯುವ ಪ್ರಶಸ್ತಿ ವಿಜೇತ ಮತ್ತು ಕ್ಲಬ್‍ನ ಮಾಜಿ ಅಧ್ಯಕ್ಷ ಮೊಹಮ್ಮದ್ ಹಸನ್, ಸಮಾಜ ಸೇವಕ ಅಬ್ದುಲ್ ಗಫೂರ್ ಮಾಂಡ್ಲಿಕ್, ಅರಣ್ಯ ಇಲಾಖೆಯ ರತ್ನಾಕರ್ ನೇತ್ರೇಕರ್ ಮತ್ತಿತರರು ಉಪಸ್ಥಿತರಿದ್ದರು. ಕ.ಸಾ.ಪ.ಸದಸ್ಯೆ ಫೈರೋಜಾ ಬೇಗಂ ಶೇಖ್ ಎಲ್ಲರನ್ನು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

error: